ದೇವಸ್ಥಾನದಲ್ಲಿ ಸರಣಿ ಕಳ್ಳತನ: 24 ಗಂಟೆಯಲ್ಲೇ ಕಳ್ಳನನ್ನು ಹೆಡೆಮುರಿ ಕಟ್ಟಿದ ಪೊಲೀಸರು!

ಕಾರವಾರ: ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸುವಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ದೂರು ದಾಖಲಾದ ಕೇವಲ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಲಕ್ಷಾಂತರ ರೂಪಾಯಿ ಮೌಲ್ಯದ ಪೂಜಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಕಾರವಾರದ ಗಿಂಡಿವಾಡ ಮೂಲದ ಆಟೋ ಚಾಲಕ ವಿನಯ ಅಲಿಯಾಸ್ ವಿನಾಯಕ ದಯಾನಂದ ಗಾಂವ್ಕರ್ (40) ಎಂದು ಗುರುತಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ 87,000 ರೂ. ಅಂದಾಜು ಮೌಲ್ಯದ 174 ಕೆ.ಜಿ ತೂಕದ ಹಿತ್ತಾಳೆ ಮತ್ತು ತಾಮ್ರದ ಪೂಜಾ ಸಾಮಗ್ರಿಗಳನ್ನು (ಘಂಟೆ, ದೀಪದ ಕಂಬ, ಆರತಿ ತಟ್ಟೆ ಇತ್ಯಾದಿ) ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಕಾರವಾರ ಶಹರ, ಕಾರವಾರ ಗ್ರಾಮೀಣ ಮತ್ತು ಚಿತ್ತಾಕುಲಾ ಪೊಲೀಸ್ ಠಾಣೆಗಳಲ್ಲಿ ಜೂನ್ 06 ಮತ್ತು 07 ರಂದು ಒಟ್ಟು 5 ಪ್ರಕರಣಗಳು ದಾಖಲಾಗಿದ್ದವು.

ಕಳೆದ ಕೆಲವು ದಿನಗಳ ಅಂತರದಲ್ಲಿ ಕಾರವಾರ ತಾಲೂಕಿನಾದ್ಯಂತ ಸುಮಾರು 6-7 ದೇವಸ್ಥಾನಗಳಲ್ಲಿ ಕಳ್ಳತನ ನಡೆದಿತ್ತು. ಆದರೆ, ಹುಂಡಿಯಲ್ಲಿದ್ದ ಹಣದ ಬದಲಾಗಿ ಕೇವಲ ಲೋಹದ ಪೂಜಾ ವಸ್ತುಗಳೇ ಕಳ್ಳತನವಾಗುತ್ತಿದ್ದರಿಂದ ಹಾಗೂ ಅವು ಕಡಿಮೆ ಮೌಲ್ಯದ ವಸ್ತುಗಳಾಗಿದ್ದರಿಂದ ಬಹುತೇಕ ದೇವಾಲಯದ ಆಡಳಿತ ಮಂಡಳಿಗಳು ನಿರ್ಲಕ್ಷ್ಯ ವಹಿಸಿ ಪೊಲೀಸ್ ಠಾಣೆಗೆ ದೂರು ನೀಡಿರಲಿಲ್ಲ.
ಆದರೆ, ಮೇ 20 ರಂದು ಕಾರವಾರದ ಹಬ್ಬುವಾಡ ರಸ್ತೆಯಲ್ಲಿರುವ ದಾಸಮಾರುತಿ ದೇವಸ್ಥಾನದಲ್ಲಿ ಸುಮಾರು 50 ಕೆ.ಜಿ ತೂಕದ ಪೂಜಾ ಸಾಮಗ್ರಿಗಳು ಕಳುವಾಗಿದ್ದವು. ಈ ಬಗ್ಗೆ ಗ್ರೀನ್ ಸ್ಟ್ರೀಟ್ ನಿವಾಸಿ ಶಾಮಸುಂದರ ಎಂಬುವವರು ಜೂನ್ 06 ರಂದು ಕಾರವಾರ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ತನಿಖೆ ಚುರುಕುಗೊಳಿಸಿದರು.

ದೂರು ದಾಖಲಾಗುತ್ತಿದ್ದಂತೆ ಕಾರವಾರ ಉಪವಿಭಾಗದ ಡಿವೈಎಸ್‌ಪಿ ಗಿರೀಶ ವಿ. ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು. ಬಾತ್ಮಿದಾರರ ಖಚಿತ ಮಾಹಿತಿ ಹಾಗೂ ನಗರದಾದ್ಯಂತ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ತಂಡ, ಆರೋಪಿ ವಿನಾಯಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ವಿಚಾರಣೆ ವೇಳೆ ಆರೋಪಿಯು ಕಾರವಾರ ಶಹರ, ಕಾರವಾರ ಗ್ರಾಮೀಣ ಹಾಗೂ ಚಿತ್ತಾಕುಲಾ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ತಾನೇ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನಿಂದ ಒಟ್ಟು 174 ಕೆ.ಜಿ ತೂಕದ ಹಿತ್ತಾಳೆ ಮತ್ತು ತಾಮ್ರದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ ಹಾಗೂ ಡಿವೈಎಸ್ಪಿ ಗಿರೀಶ ವಿ. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಕಾರವಾರ ಶಹರ ಪೊಲೀಸ್ ಠಾಣೆಯ ನಿರೀಕ್ಷಕಿ ಜಯಶ್ರೀ ಮಾನೆ, ಪಿಎಸ್ಐ ಉದ್ದಪ್ಪ ಎ. ಧರೆಪ್ಪನವರ ಮತ್ತು ಸಿಬ್ಬಂದಿಗಳಾದ ಸೂರಜ ಕೊಠಾರಕರ, ಸಚೀನ ನಾಯ್ಕ, ಹಸನ್ ಕುಟ್ಟಿ, ರಾಜೇಶ ನಾಯಕ್, ಮದೇವ ಸಂಗಾಪುರ, ಪ್ರಕಾಶ ದಂಡೆಪ್ಪನವರ, ಪ್ರತಾಪಕುಮಾರ ಎಂ. ಪಾಲ್ಗೊಂಡಿದ್ದರು.
ಜೊತೆಗೆ ಜಿಲ್ಲಾ ಪೊಲೀಸ್ ಕಚೇರಿಯ ಸಿ.ಡಿ.ಆರ್ ಘಟಕದ ಎ.ಆರ್.ಎಸ್.ಐ ಬಬನ್ ಕದಂ, ಸಿಬ್ಬಂದಿಗಳಾದ ಉದಯ ಗುನಗಾ, ಮಹಾಲಿಂಗ ಸಾವಳಗಿ ಅವರು ತಾಂತ್ರಿಕ ಬೆಂಬಲ ನೀಡಿದ್ದರು. ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಕ್ಷಿಪ್ರ ಕಾರ್ಯಾಚರಣೆ ಮೂಲಕ ಪ್ರಕರಣ ಭೇದಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

Leave a Reply

Your email address will not be published. Required fields are marked *