ಅಂಕೋಲಾ: ಐತಿಹಾಸಿಕ ಹಿನ್ನೆಲೆಯುಳ್ಳ ಅಂಕೋಲೆಯ ಆರಾಧ್ಯ ದೈವ, ಗ್ರಾಮದೇವಿ ಭೂಮ್ತಾಯಿ ಶಾಂತಾದುರ್ಗೆಯ ಪ್ರಸಿದ್ಧ ಬಂಡಿಹಬ್ಬವು ಅತ್ಯಂತ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ನೆರವೇರಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ತಾಲೂಕಿನಾದ್ಯಂತ ಹಬ್ಬದ ಕಳೆ ಮನೆಮಾಡಿತ್ತು. ಧಾರ್ಮಿಕ ವಿಧಿವಿಧಾನಗಳ ಭರ್ಜರಿ ಮೆರುಗು
ಹಬ್ಬದ ಅಂಗವಾಗಿ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ದೇವಿಯ ಕಲಶಕ್ಕೆ ವಿಶೇಷ ಪೂಜೆ,ಭಕ್ತಾದಿಗಳಿಂದ ಉಡಿ ತುಂಬಿ ಇಷ್ಟಾರ್ಥಗಳನ್ನು ಈಡೇರಲು ಹರಕೆ ಕಟ್ಟಿಕೊಂಡರು.ಹಾಗೆಯೇ ಕಲಶಕ್ಕೆ ಅಲಂಕಾರ ಮಾಡಲಾಯಿತು. ಸಾಂಪ್ರದಾಯಿಕ ಕಟ್ಟುಪಾಡುಗಳಂತೆ ನಡೆದ ಧಾರ್ಮಿಕ ವಿಧಿವಿಧಾನಗಳಿಗೆ ಊರಿನ ಸಮಸ್ತರು ಸಾಕ್ಷಿಯಾದರು. ದೇವಿಯ ದರ್ಶನಕ್ಕಾಗಿ ಭಕ್ತಾದಿಗಳು ಸುಡುಬಿಸಿಲನ್ನೂ ಲೆಕ್ಕಿಸದೆ ಸರದಿಯಲ್ಲಿ ನಿಂತು ಪುನೀತರಾದರು.





ತಾಲೂಕಿನ ಕುಂಬಾರಕೇರಿಯ ಕಲಶ ದೇವಾಲಯದಿಂದ ಪಂಚವಾದ್ಯ ಘೋಷ, ಛತ್ರ-ಚಾಮರಗಳ ಸಕಲ ವೈಭವದೊಂದಿಗೆ ಕಲಶವನ್ನು ಹೊತ್ತ ಗುನಗರು, ಬಿಡುಗುನಗರು, ಪರಿವಾರ ದೇವತೆಗಳ ಕಟ್ಟಿಗೆದಾರರ ಉಪಸ್ಥಿತಿಯಲ್ಲಿ ತಳಿರು ತೋರಣಗಳಿಂದ ಶೃಂಗರಿಸಿದ ದಾರಿಯುದ್ದಕ್ಕೂ ಭಕ್ತರಿಂದ ಆರತಿಯನ್ನು ಸ್ವೀಕರಿಸುತ್ತಾ ವಿಜೃಂಭಣೆಯಿಂದ ತನ್ನ ಆಸ್ಥಾನಕ್ಕೆ ಬರುವ ವೈಭವವನ್ನು ನೋಡಲು ರಸ್ತೆಯ ಪಕ್ಕದಲ್ಲಿ ಸಹಸ್ರಾರು ಭಕ್ತರು ಜಮಾವಣೆಗೊಂಡು ಕಣ್ತುಂಬಿಕೊಳ್ಳುತ್ತಾರೆ.ನಂತರ ಬಂಡಿ ಕಟ್ಟೆಯ ಬಳಿ ದೇವಿಯ ಕಲಶ ಬರುತ್ತಿದ್ದಂತೆ ಇಡುಗಾಯಿಯನ್ನು ಒಡೆಯಲಾಗುತ್ತದೆ ತದನಂತರದಲ್ಲಿ ದೇವಿಯ ಕಳಸವನ್ನು ಬಂಡಿಯಮೇಲೆ ಮುಖ್ಯ ಗುನುಗರು ಹೊತ್ತು ಕುಳಿತ ಬಳಿಕ ಬಂಡಿಯನ್ನು ತಿರುಗಿಸಲಾಗುತ್ತದೆ,ಒಂದು ಸುತ್ತು ತಿರುಗಿದ ಬಳಿಕ ಭೂಮ್ತಾಯಿಯ ಪರಿವಾರ ದೇವತೆಗಳ ಕಟ್ಟಿಗೆದಾರರು ಬಂಡಿಯ ಮೇಲೆ ಕುರುತ್ತಾರೆ ನಂತರದಲ್ಲಿ ಕಳಸ ದೇವಾಸ್ತನಕ್ಕೆ ತೆರಳಿ ಅಲ್ಲಿಂದ ಪುನಃ ಕಳಸ ದೇವಾಸ್ಥಾನಕ್ಕೆ ತೆರಳುತ್ತದೆ ಇಲ್ಲಿಗೆ ಬಂಡಿಹಬ್ಬ ಸಂಪನ್ನಗೊಳ್ಳುತ್ತದೆ.

ಗ್ರಾಮದೇವಿಯ ಬಂಡಿಹಬ್ಬದ ನಿಮಿತ್ತ ಅಂಕೋಲಾ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಒಟ್ಟಾರೆಯಾಗಿ, ಶಾಂತಾದುರ್ಗೆಯ ಈ ವರ್ಷದ ಬಂಡಿಹಬ್ಬವು ಭಕ್ತಿ ಮತ್ತು ವಿಜೃಂಭಣೆಯ ಸಂಗಮವಾಗಿ ಸಾಂಗೋಪಾಂಗವಾಗಿ ನೆರವೇರಿತು.


